Mangaluru
lekhaka-Kishan Kumar

ಮಂಗಳೂರು, ಜೂನ್ 22: ಮಂಗಳೂರು ನಗರದ ಕದ್ರಿ ಸಂಚಾರಿ ಠಾಣಾ ರಸ್ತೆ ಬದಿಯಲ್ಲಿ ಅಪಘಾತಕ್ಕೊಳಗಾದ ನ್ಯಾನೊ ಕಾರೊಂದನ್ನು ಕಳೆದ ಒಂದು ವಾರದಿಂದ ನಿಲ್ಲಿಸಲಾಗಿದೆ. ಈ ಕಾರಿನ ಮುಂಭಾಗ ಅಳವಡಿಸಿರುವ ಬ್ಯಾನರ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.
ಈ ಬ್ಯಾನರ್ ನಲ್ಲಿ ವಾಹನ ವಿಮೆಯ ಮಹತ್ವದ ಕುರಿತು ಪೊಲೀಸರು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಎಲ್ಲಾ ವಾಹನ ಸವಾರರು ಇದನ್ನು ನೋಡಲು ಅನುಕೂಲವಾಗುವಂತೆ ಕಾರನ್ನು ನಿಲ್ಲಿಸಲಾಗಿದೆ. ಈ ಬ್ಯಾನರ್ ನಲ್ಲಿ “ನನ್ನ ಹೆಸರು KA12N8707 NANO CAR ನನ್ನನ್ನು ನನ್ನ ಖರೀದಿ ಮಾಡಿರುತ್ತಾನೆ. ಆದರೆ ಮಾಲಿಕ ನನಗೆ ಇನ್ಸುರೆನ್ಸ್ ಮಾಡಿಸಿಲ್ಲ. ಜೂ.11ರಂದು ಯೆಯ್ಯಾಡಿಯಲ್ಲಿ ಮಾಲಿಕನು ಅಜಾಗರೂಕತೆಯಿಂದ ನನ್ನನ್ನು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾನೆ. ವಿಮೆ ಇಲ್ಲದ ಕಾರಣ ನನ್ನನ್ನು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇಡಲಾಗಿದೆ. ನಾನು ಅನಾಥನಾಗಿದ್ದೇನೆ. ನನ್ನ ಪರಿಸ್ಥಿತಿ ಯಾರಿಗೂ ಬೇಡ” ಎಂಬ ಬ್ಯಾನರ್ ಅಳವಡಿಸಲಾಗಿದೆ.

ಮೇರಿಹಿಲ್ ನಿಂದ ಕೆಪಿಟಿ ಕಡೆಗೆ ಬರುತ್ತಿದ್ದ ವಾಮಂಜೂರಿನ ವಿನೋದ್ ಎಂಬಾತನ ನ್ಯಾನೊ ಕಾರು ಯೆಯ್ಯಾಡಿ ಜಂಕ್ಷನ್ ನಲ್ಲಿ ಜೂನ್ 11ರಂದು ಮಧ್ಯಾಹ್ನ 3ಗಂಟೆಗೆ ಬೈಕೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಬೈಕ್ ಅನ್ನು ವೀರಭದ್ರಪ್ಪ ಹಾಲಿಗೇರಿ ಸವಾರಿ ಮಾಡುತ್ತಿದ್ದು, ಅವರ ಪುತ್ರ ಸುರೇಶ್ ಹಿಂಬದಿ ಸವಾರರಾಗಿದ್ದರು. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವೀರಭದ್ರಪ್ಪ ಹಾಲಿಗೇರಿಯವರು ಮರುದಿನ ಮೃತಪಟ್ಟಿದ್ದಾರೆ.
ಆದರೆ ಕಾರು ಮಾಲಕ ಅಪಘಾತದ ದಿನದಂದೇ ಬೆಳಗ್ಗೆ ವಿಮೆಯನ್ನು ನವೀಕರಿಸಿದ್ದರು, ಆದರೆ ಪಾಲಿಸಿಯು 12 ಗಂಟೆಯ ಬಳಿಕದಿಂದ ಅನ್ವಯವಾಗುತ್ತದೆ. ಪರಿಣಾಮ ವಿಮೆ ನವೀಕರಿಸದ ಹಿನ್ನೆಲೆ ನ್ಯಾನೋ ಕಾರು ಮಾಲಕರಿಂದ ಮೃತರಿಗೆ ವಿಮೆ ಪಡೆಯಲು ಸಾಧ್ಯವಾಗಿಲ್ಲ. ಇದೀಗ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 ಮತ್ತು 304(ಎ) ಅಡಿಯಲ್ಲಿ ಕಾರು ಮಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
English summary
Mangaluru: Kadri police raise awareness over importance of vehicle insurance in unique way.
Story first published: Thursday, June 22, 2023, 15:55 [IST]