Ballari
oi-Gururaj S

ಬಳ್ಳಾರಿ, ಜೂನ್ 27: “ರಾಜ್ಯದಲ್ಲಿ 2.16 ಕೋಟಿ ಜನರು ಗೃಹಜ್ಯೋತಿ ಯೋಜನೆ ಫಲಾನುಭವಿಗಳಿದ್ದು, ಅದರಲ್ಲಿ 2.14 ಕೋಟಿ ಜನರು ಅರ್ಹರಿದ್ದಾರೆ. ನಾವು ನೀಡಿದ ಆಶ್ವಾಸನೆಯಂತೆ ಜನರಿಗೆ ಉಚಿತ ವಿದ್ಯುತ್ ನೀಡಲಾಗುವುದು” ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ಹೇಳಿದರು.
ಬಳ್ಳಾರಿ ಜಿಲ್ಲೆಯ ಕುಡತಿನಿ ಬಳಿಯಿರುವ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಅವರು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಗೃಹಜ್ಯೋತಿ ಯೋಜನೆ, ವಿದ್ಯುತ್ ದರ ಏರಿಕೆಯ ಕುರಿತು ಮಾಹಿತಿ ಹಂಚಿಕೊಂಡರು.
ಗೃಹಜ್ಯೋತಿ ಯೋಜನೆ; ಅರ್ಜಿ ಸಲ್ಲಿಕೆಗೆ ಲಿಂಕ್, ವಿವರಗಳು, ಸಹಾಯವಾಣಿ

“ಗೃಹಜ್ಯೋತಿ ಯೋಜನೆಯನ್ನು ಜುಲೈಯಿಂದಲೇ ಅನುಷ್ಠಾನಗೊಳಿಸಲಾಗುವುದು. 200 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಆಗಸ್ಟ್ ತಿಂಗಳಿಂದ ಜನರಿಗೆ ಶೂನ್ಯ ಬಿಲ್ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಯೂನಿಟ್ ಬಳಸಿದಲ್ಲಿ ಬಳಕೆ ಮಾಡಿದ ವಿದ್ಯುತ್ ಬಿಲ್ ಪೂರ್ಣ ಪಾವತಿಸಬೇಕಾಗುತ್ತದೆ” ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿವೆ ಉತ್ತರ; ಯಾರಿಗೆ ಸಿಗುತ್ತೆ ಫ್ರೀ ವಿದ್ಯುತ್ !
ಕರ್ನಾಟಕ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ನೀಡಿದ 5 ಗ್ಯಾರಂಟಿಗಳಲ್ಲಿ ‘ಗೃಹಜ್ಯೋತಿ’ ಸಹ ಒಂದು. ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ಗಳವರೆಗೆ ಉಚಿತವಾಗಿ ವಿದ್ಯುತ್ ನೀಡುವುದು ‘ಗೃಹಜ್ಯೋತಿ’ ಯೋಜನೆ. ಈ ಯೋಜನೆಗಾಗಿ ಜೂನ್ 18ರಿಂದಲೇ ನೋಂದಣಿ ಆರಂಭವಾಗಿದೆ.
ಗೃಹಜ್ಯೋತಿ; ಹೊಸ ಲಿಂಕ್ ಬಿಡುಗಡೆ, ನೋಂದಣಿಗೆ ಡೆಡ್ಲೈನ್ ಇಲ್ಲ
ಜನರು ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಛೇರಿಗಳಲ್ಲಿಯೂ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ. ಇದುವರೆಗೂ 50 ಲಕ್ಷಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದಾರೆ.
ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಇಂಧನ ಇಲಾಖೆ ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಯಾಗಲು ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ನಿಗದಿ ಮಾಡಿಲ್ಲ. ಆನ್ಲೈನ್ ಮೂಲಕ ಜನರು ಸುಲಭವಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
ನವೀಕರಿಸಬಹುದಾದ ಇಂಧನ; ಇಂಧನ ಸಚಿವ ಕೆ. ಜೆ. ಜಾರ್ಜ್, “ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಎಲೆಕ್ಟ್ರಾನಿಕ್ ವಾಹನಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ” ಎಂದು ಹೇಳಿದರು.
ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವ ಕುರಿತು ಮಾತನಾಡಿದ ಸಚಿವರು, “ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬದಿಂದಾಗಿ ವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗುವ ಆಶಾಭಾವನೆ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಇರುವ ಶಾಖೋತ್ಪನ್ನ ಕೇಂದ್ರಗಳನ್ನು ಬಲಪಡಿಸಲಾಗುವುದು. ಯಾವುದೇ ರೀತಿಯಲ್ಲಿಯೂ ಶಾಖೋತ್ಪನ್ನ ಕೇಂದ್ರಗಳನ್ನು ಹೆಚ್ಚಿಸುವುದಿಲ್ಲ. ಸೌರ ವಿದ್ಯುತ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಲ್ಲಿದ್ದಲಿನ ಕೊರತೆ ಇಲ್ಲ. ಕಲ್ಲಿದ್ದಲಿನ ಗುಣಮಟ್ಟ ಕಾಯ್ದುಕೊಳ್ಳಲು ತಿಳಿಸಲಾಗಿದೆ” ಎಂದು ಸಚಿವರು ವಿವರಿಸಿದರು.
ನೋಂದಣಿ ಮಾಡಲು ಲಿಂಕ್; ಸೇವಾ ಸಿಂಧು ಪೋರ್ಟಲ್ ಮೂಲಕ ಜನರು ‘ಗೃಹಜ್ಯೋತಿ’ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು. ಜನರು ಸೇವಾಸಿಂಧು ಹೆಸರಿನ ನಕಲಿ ಮೊಬೈಲ್ ಅಪ್ಲಿಕೇಶನ್ಗಳ ಬಗ್ಗೆ ಎಚ್ಚರವಹಿಸಬೇಕು. ಇ-ಗವರ್ನೆನ್ಸ್ ಇಲಾಖೆ ಸೇವಾಸಿಂಧು ಹೆಸರಿನಲ್ಲಿ ಯಾವುದೇ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟನೆ ನೀಡಿದೆ.
‘ಗೃಹಜ್ಯೋತಿ’ ಯೋಜನೆಯು 2023ರ ಆಗಸ್ಟ್ 1 (ಜುಲೈ ಮಾಹೆಯ ವಿದ್ಯುಚ್ಛಕ್ತಿ ಬಳಕೆ) ರಿಂದ ಜಾರಿಗೆ ಬರಲಿದ್ದು ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ಆದರೆ ಫಲಾನುಭವಿಯಾಗಲು ನೋಂದಣಿ ಕಡ್ಡಾಯ. ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು https://sevasindhugs.karnataka.gov.in/ ಲಿಂಕ್ ಬಳಕೆ ಮಾಡಬೇಕು. ಲಿಂಕ್ ಕ್ಲಿಕ್ ಮಾಡಿ, ಅದರಲ್ಲಿ ‘ಗೃಹಜ್ಯೋತಿ’ ಕ್ಲಿಕ್ ಮಾಡಿದರೆ ಮುಂದಿನ ಪುಟ ತೆರದುಕೊಳ್ಳಲಿದೆ.
ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ. ಯೋಜನೆ ಅಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಹಾಗೂ ಅಲ್ಪಕಾಲಾವಧಿಯಲ್ಲಿಯೇ ಬಹುತೇಕ ಅರ್ಜಿ ಸಲ್ಲಿಕೆಯಾಗುವ ಕಾರಣ ವಿದ್ಯುತ್ ಶಕ್ತಿ ಕಚೇರಿಗಳಲ್ಲಿಯೇ ‘ಗೃಹಜ್ಯೋತಿ’ ಯೋಜನೆ ನೋಂದಣಿಗೆ ವಿಶೇಷ ಕೌಂಟರ್ ತೆರೆಯಲಾಗಿದೆ.
English summary
We are committed to provide 200 unit free electricity under Gruha Jyoti scheme said energy minister of Karnataka KJ George.